ಹೈಟೆಕ್ ಮಾದರಿ ಹುಕ್ಕೇರಿ ಕೋರ್ಟ್ ಕಟ್ಟಡ ನಿರ್ಮಾಣ: ಸಚಿವ ಜಾರಕಿಹೊಳಿ

Ravi Talawar
WhatsApp Group Join Now
Telegram Group Join Now
ಹುಕ್ಕೇರಿ,27: ಬಹುದಿನಗಳ ಬೇಡಿಕೆಯಾಗಿರುವ ಹುಕ್ಕೇರಿಯ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಶುಕ್ರವಾರ ನಡೆದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಮತಪ್ರಚಾರದಲ್ಲಿ ಮಾತನಾಡಿದ ಅವರು, ಹುಕ್ಕೇರಿ ಕೋರ್ಟ್ನ ನೂತನ ಕಟ್ಟಡ ನಿರ್ಮಾಣಕ್ಕೆ ಕ್ಯಾರಗುಡ್ ಬಳಿ ಈಗಾಗಲೇ ಅಗತ್ಯ ನಿವೇಶನ ಮಂಜೂರಾಗಿದೆ. ಶೀಘ್ರವೇ ಹೈಟೆಕ್ ಮಾದರಿ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿನ ನ್ಯಾಯಾಲಯಗಳ ಸುಧಾರಣೆಗೆ ಹಲವು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ರಾಯಬಾಗ ಮತ್ತು ಚಿಕ್ಕೋಡಿ ಕೋರ್ಟ್ನ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅನೀಸ್ ವಂಟಮೂರಿ, ಮಾಜಿ ಅಧ್ಯಕ್ಷ ಆರ್.ಪಿ.ಚೌಗಲಾ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಸಹಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಹಿರಿಯ ನ್ಯಾಯವಾದಿಗಳಾದ ಬಿ.ಬಿ.ಪಾಸಪ್ಪಗೋಳ, ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಭೀಮಸೇನ ಬಾಗಿ, ಬಿ.ಕೆ.ಮಗೆನ್ನವರ, ಎಂ.ಎA.ಪಾಟೀಲ, ಎಂ.ಜಿ.ಕರಾಡೆ, ಸಿದ್ದಪ್ಪ ಏಗನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ ಮತ್ತಿತರರು ಉಪಸ್ಥಿತರಿದ್ದರು.
ಕೋಚರಿ ಏತ ನೀರಾವರಿಯ ಸುಲ್ತಾನಪುರ ಕಾಲುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಇದರಿಂದ ಈ ವ್ಯಾಪ್ತಿಯ ಕೋಚರಿ, ಮಸರಗುಪ್ಪಿ, ಅರ್ಜುನವಾಡ, ಹುಕ್ಕೇರಿ, ಬಸ್ತವಾಡ, ಮದಮಕ್ಕನಾಳ, ಗೌಡವಾಡ, ಮದಿಹಳ್ಳಿ, ಬೆಣಿವಾಡ ಕೆನಾಲ್‌ಗಳು ಗಿಡಗಂಟಿಗಳಿಂದ  ಬೆಳೆದು ನೀರು ಸರಾಗವಾಗಿ ಸಾಗಿ ಕೊನೆ ಹಂತ ತಲುಪುತ್ತಿಲ್ಲ. ಕೂಡಲೇ ಈ ಕಾಲುವೆಗಳನ್ನು ದುರಸ್ತಿ ಮಾಡಿ ನೀರಾವರಿ ಮತ್ತು ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಬೇಕು ಎಂದು ಹಿರಿಯ ನ್ಯಾಯವಾದಿ ಭೀಮಸೇನ ಬಾಗಿ ಅವರು ಇದೇ ವೇಳೆ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಜಾರಕಿಹೊಳಿ ಅವರು ಸಂಭಧಿಸಿದ ನೀರಾವರಿ ಇಲಾಖೆ ಮೂಲಕ ಈ ಕಾಲುವೆ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
WhatsApp Group Join Now
Telegram Group Join Now
Share This Article