ಎಸ್​ಐಟಿ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ: ಸಚಿವ ಪರಮೇಶ್ವರ್

Ravi Talawar
WhatsApp Group Join Now
Telegram Group Join Now

ಬೆಂಗಳೂರು,08: ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣ ಅತ್ಯಂತ ಗಂಭೀರ ಕೇಸ್ ಆಗಿದೆ. ಎಸ್​ಐಟಿ ಅಧಿಕಾರಿಗಳು ಈ ಪ್ರಕರಣದಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಕರೆದಿದ್ದ ತುರ್ತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಡಿ. ಕೆ. ರವಿ ಪ್ರಕರಣ ಸಿಬಿಐಗೆ ಕೊಟ್ಟಾಗ ಏನಾಯ್ತು. ಸಿಬಿಐ ವರದಿಯನ್ನೇ ಸರಿ ಇಲ್ಲ ಅಂತ ಎಲ್ಲಾ ಹೇಳುತ್ತಿದ್ದರು. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಎಸ್​ಐಟಿ ತನಿಖೆ ಮೇಲೆ ವಿಶ್ವಾಸ ಇಡೋಣ ಎಂದರು.

ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಬರುವುದಿಲ್ಲ. ಎಸ್​ಐಟಿ ತನಿಖೆ ಬಗ್ಗೆ ವಿಶ್ವಾಸ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು. ಎಸ್​ಐಟಿ ಬಗ್ಗೆ ಗೊತ್ತಿದೆ. ಎಸ್​ಐಟಿ ತಂಡ ಸಮರ್ಥವಾಗಿಯೇ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ನಾನಾಗಲಿ, ಸಿಎಂ, ಡಿಸಿಎಂ ಯಾರೂ ಹಸ್ತಕ್ಷೇಪ ಮಾಡಲ್ಲ. ಜೊತೆಗೆ ಕುಮಾರಸ್ವಾಮಿ ಅವರ ಅವಧಿಯಲ್ಲೂ ಯಾವುದೇ ಪ್ರಕರಣ ಸಿಬಿಐಗೆ ನೀಡಿಲ್ಲ ಎಂದು ಹೇಳಿದರು.

ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ತಂಡ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು​ ಕರೆತರಲು ಈಗಾಗಲೇ ಎಸ್​ಐಟಿ ತಂಡವು ಸಿಬಿಐ ನೆರವು ಕೋರಿದ್ದು, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್ ರೇವಣ್ಣ ಬರುವವರೆಗೂ ತ್ವರಿತಗತಿಯಲ್ಲಿ ವಿಚಾರಣೆ ಮಾಡುವುದು ಕಷ್ಟ. ಇನ್ನು, ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಬಂಧಿಸಲಾಗಿದೆ. ಜೊತೆಗೆ ದೂರು ನೀಡಿದವರಿಂದಲೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ಈ ಪ್ರಕರಣದ ಕುರಿತೂ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಡಿಸಿಎಂ ಡಿ. ಕೆ. ಶಿವಕುಮಾರ್​ ವಿರುದ್ಧ ದೂರು ವಿಚಾರವಾಗಿ ಮಾತನಾಡಿ, ಅವರಿಗೆ ನೋಟಿಸ್​ ಕೊಡುವ ಬಗ್ಗೆ ಎಸ್​ಐಟಿ ತೀರ್ಮಾನ ಮಾಡುತ್ತದೆ. ಅವರ ಮೇಲೆ ನಮಗೆ ವಿಶ್ವಾಸ ಇದೆ. ವರದಿ ಕೊಡಲಿ ನೋಡೋಣ. ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ದೇವರಾಜೇಗೌಡ ಜೊತೆ ಮಾತನಾಡಿರೋ ಆಡಿಯೋ ರಿಲೀಸ್ ಕುರಿತು ಪ್ರತಿಕ್ರಿಯಿಸಿ, ಅದನ್ನೂ ಎಸ್​ಐಟಿ ಗಮನಿಸುತ್ತದೆ. ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಅವರಿಗೆ ಶಿಕ್ಷೆ ಆಗಬಾರದು ಎಂದು ಏನಿಲ್ಲ ಎಂದರು.

ಎಸ್​ಐಟಿ ಜೊತೆ ಸಿಎಂ ಸಭೆ ನಡೆಸಿದ ಕುರಿತು ಮಾತನಾಡಿ, ನಾನು ಈ ಬಗ್ಗೆ ಮಾಹಿತಿ ನೀಡುವುದಿಲ್ಲ. ಆದರೆ, ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇರಬೇಕಲ್ವಾ?. ಹಾಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತೇವೆ ಎಂದು ಹೇಳಿದರು. ಪರಮೇಶ್ವರಗೆ ಬೆನ್ನು ಮೂಳೆ ಇದೆಯಾ ಎಂದ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿ, ನಮ್ಮನ್ನು ಆರಿಸಿ ಜನ ಕಳಿಸಿದ್ದಾರೆ. ಅವರು ಅಧಿಕಾರ ಹಿಡಿದಿಲ್ಲ. ಅವರು ಖುಷಿ ಪಡಬೇಕು ನಾವಾಗಿದ್ದೇವೆ ಅಂತ. ಅದು ಬಿಟ್ಟು ಬೆನ್ನು ಮೂಳೆ ಅಂತೆಲ್ಲಾ ಮಾತಾಡಬಾರದು ಎಂದು ತಿರುಗೇಟು ನೀಡಿದರು.

ಇಂಟಲಿಜೆನ್ಸ್ ಫೇಲ್ಯೂರ್ ವಿಚಾರವಾಗಿ ಮಾತನಾಡಿ, ಇಮಿಗ್ರೇಷನ್ ಯಾರ ಬಳಿ ಇದೆ. ಬ್ಲೇಮ್ ಗೇಮ್ ಮಾಡೋದಾದ್ರೆ ನಾವು ಅವರ ಮೇಲೆ ಹೇಳಬಹುದು. ಕೇಂದ್ರ ನಮಗೆ ಸಹಕಾರ ನೀಡಲಿ, ಯಾರೂ ಕೂಡ ಪ್ರಭಾವ ಬೀರಲು ಸಾಧ್ಯವಿಲ್ಲ. ನಾವ್ಯಾರೂ ಹೀಗೆ ಮಾಡಿ ಎಂದು ಸೂಚನೆ ಕೊಟ್ಟಿಲ್ಲ. ಈ ಕುರಿತು ಎಸ್​ಐಟಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article