“ರಾಮೇಶ್ವರಂ ಕೆಫೆ ಸ್ಫೋಟ” ಬೆಂಗಳೂರಿನ 5 ಕಡೆ ಎನ್ಐಎ ರೇಡ್!

Ravi Talawar
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳ ಬುಧವಾರ ನಗರದ ಐದು ಕಡೆ ದಾಳಿ ನಡೆಸಿದೆ. ಶಂಕಿತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಬೆಂಗಳೂರಿನ ಇಬ್ಬರು ಶಂಕಿತರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿರುವ ವಿಚಾರ ಮಂಗಳವಾರ ತಿಳಿದುಬಂದಿತ್ತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 5ಕ್ಕೂ ಹೆಚ್ಚು ಕಡೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ಸೇರಿದಂತೆ 5 ಕಡೆ ದಾಳಿ ಮಾಡಲಾಗಿದೆ. ಬೆಂಗಳೂರಿನಿಂದ 5ಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿರುವ ಎನ್ಐಎ ತಂಡದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ.

ಚೆನ್ನೈನ ಮೂರು ಕಡೆ ಕೂಡ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಶಂಕಿತರ ಶೋಧ ನಡೆಸಿದೆ. ಉಗ್ರರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪದ ಮೇಲೆ ಶಂಕಿತರ ಮನೆಗಳಲ್ಲಿ ಶೋಧ ನಡೆಸಿದೆ.

ತಮಿಳುನಾಡಿನಲ್ಲಿ ನಡೆದಿರುವ ಎನ್‌ಐಎ ದಾಳಿ ಕೂಡ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಕೆಲವರನ್ನು ಬಂಧಿಸಲಾಗಿತ್ತು. ಬಂಧಿತರಿಂದ ಹಲವು ಮಹತ್ವದ ಸುಳಿವುಗಳು ಎನ್ಐಎ ಅಧಿಕಾರಿಗಳಿಗೆ ಲಭಿಸಿದ್ದವು. ಶಿವಮೊಗ್ಗ ಮೂಲದ ಇಬ್ಬರು ಕೆಲ ದಿನ ಚೆನ್ನೈನಲ್ಲಿ ತಂಗಿದ್ದರು ಎನ್ನಲಾಗಿತ್ತು. ಹೀಗಾಗಿ ಈ ಎನ್ಐಎ ದಾಳಿ ನಡೆದಿದೆ. ಅದೇ ರೀತಿ ಬಾಂಬ್ ಇಟ್ಟಿದ್ದ ವ್ಯಕ್ತಿ ಧರಿಸಿದ್ದ ಟೋಪಿಯನ್ನು ಸಹ ಚೆನ್ನೈ ಸೆಂಟ್ರಲ್ನಿಂದ ಖರೀದಿಸಿರುವುದು ತನಿಖೆ ವೇಳೆ ತಿಳಿದುಬಂದಿತ್ತು.

ಬಾಂಬ್ ಇಟ್ಟಿದ್ದ ಉಗ್ರ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ ಎಂಬ ಶಂಕೆಯೂ ನಂತರದಲ್ಲಿ ವ್ಯಕ್ತವಾಗಿತ್ತು. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದ. ಉಗ್ರ ಧರಿಸಿದ್ದ 10 ನಂಬರ್ನ ಟೋಪಿಯ ಬ್ರ್ಯಾಂಡ್ನನ ಜಾಡು ಹಿಡಿದ ಎನ್ಐಎ ಅಧಿಕಾರಿಗಳಿಗೆ ಅದು ಚೆನ್ನೈಯಿಂದ ಖರೀದಿಸಿದ್ದೆಂಬುದು ತಿಳಿದುಬಂದಿತ್ತು.

ಮಾರ್ಚ್ 01 ರಂದು ಬೆಂಗಳೂರಿನ ವೈಟ್ಫಿಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಐದು ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿ ಪೊಲೀಸರು ವಹಿಸಿಕೊಂಡಿದ್ದರು. ನಂತರ ಪ್ರಕರಣದ ಗಂಭೀರತೆ ಅರಿತು ಸರ್ಕಾರ ತನಿಖೆಯನ್ನು ಎನ್ಐಎಗೆ ವರ್ಗಾಯಿಸಿತ್ತು.

 

WhatsApp Group Join Now
Telegram Group Join Now
Share This Article