ಸಿದ್ದರಾಮಯ್ಯ, ಪರಮೇಶ್ವರ ವಿಡಿಯೊಗಳೂ ಹೊರಬರಬಹುದು: ಡಿಸಿಎಂ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

Ravi Talawar
WhatsApp Group Join Now
Telegram Group Join Now

ಗೋಕಾಕ್, 07: ಪ್ರಜ್ವಲ್ ರೇವಣ್ಣ ಅವರಂತೆಯೇ ಇಂದಲ್ಲ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರ ವಿಡಿಯೊಗಳೂ ಹೊರಬರಬಹುದು. ನಾನು ಅವರಿಗೆ ಸೂಚನೆ‌ ಕೊಡುತ್ತಿದ್ದೇನೆ ಈಗಲೇ ಆ ‘ಮಹಾನಾಯಕ’ನನ್ನು ತಡೆಯಿರಿ’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಖಾಸಗಿ ವಿಡಿಯೊಗಳು ಹೊರಗೆ ಬಂದಾಗಲೇ ನಾನು ಎಚ್ಚರಿಕೆ ಕೊಟ್ಟಿದ್ದೆ. ಮಹಾನಾಯಕನೊಬ್ಬ ಪ್ರತಿಷ್ಠಿತ ಕುಟುಂಬಕ್ಕೆ ಖೆಡ್ಡಾ ತೋಡುತ್ತಿದ್ದಾನೆ ಎಂದಾಗ ನನ್ನ ಮಾತು ನಂಬಿರಲಿಲ್ಲ. ಈಗ ಏನಾಗಿದೆ ಎಂದು ಪ್ರಶ್ನಿಸಿದರು.

ರಾಜಕಾರಣದಲ್ಲಿ ಈಗ ಸೈದ್ಧಾಂತಿಕ ಹೋರಾಟ ಮುಗಿದು ಹೋಗಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ತುಳಿಯುವವರೇ ಜಾಸ್ತಿಯಾಗಿದೆ. ಸಿ.ಡಿ, ಪೆನ್‌ಡ್ರೈವ್‌ ಪ್ರಕರಣಗಳು ಯಾವುದು ಒಳ್ಳೆಯದಲ್ಲ. ಇದನ್ನು ಪಕ್ಷಾತೀತವಾಗಿ ಇಲ್ಲಿಗೆ ಮುಗಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್‌ ಅವರ ಸಿ.ಡಿಗಳು ಆಚೆ ಬಂದರೂ ಅಚ್ಚರಿಪಡುವಂಥದ್ದು ಏನೂ ಇಲ್ಲ ಎಂದು ಹೇಳಿದರು.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಆಚೆ ಬಂದಿದ್ದರ ಹಿಂದೆ ನಾನು ಮೊದಲ ದಿನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೈವಾಡವಿದೆ ಎಂದು ಹೇಳಿದ್ದೆ. ನನ್ನ ಮಾತನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ವಕೀಲ ದೇವರಾಜೇಗೌಡ ಬಿಡುಗಡೆ ಮಾಡಿರುವ ಆಡಿಯೋ ಏನು ಹೇಳುತ್ತದೆ ಎಂದು ಪ್ರಶ್ನೆ ಮಾಡಿದರು. ಸಿ.ಎಂ ಅವರಿಗೆ ಮುಂದೆ ಕೈ‌ ಮುಗಿದು ಕೇಳಿಕೊಳ್ಳುತ್ತೇನೆ. ಈ ವಿಡಿಯೊ ಪ್ರಕರಣಗಳಿಗೆ ಪಕ್ಷಾತೀತವಾಗಿ ಕೊನೆಹಾಡಿ ಎಂದರು.

‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕರಣದಲ್ಲಿ ನೇರ ಕೈವಾಡ ಇದೆ. ಎಲ್ಲ ಸಾಕ್ಷಿ, ದಾಖಲೆಗಳೂ ನನ್ನ ಬಳಿ ಇವೆ. ಪ್ರಜ್ವಲ್ ವಿಚಾರದಲ್ಲಿ ಪರೋಕ್ಷವಾಗಿ ಆರೋಪಿ ಎನ್ನುತ್ತಿದ್ದಾರೆ. ಆದರೆ, ನನ್ನ ವಿಚಾರದಲ್ಲಿ ನೇರ ಆರೋಪಿ’ ಎಂದು ಪ್ರಶ್ನೆಯೊಂದಕ್ಕೆ‌ ಉತ್ತರಿಸಿದರು.

‘ನನ್ನ ಪ್ರಕರಣ ಸಿಬಿಐಗೆ ಕೊಟ್ಟರೆ ಎಲ್ಲ ಸಾಕ್ಷಿ ಒದಗಿಸುತ್ತೇನೆ. ನನ್ನ ಕೇಸಿನಲ್ಲಿ ಶಿವಕುಮಾರ್ ಮಾತ್ರವಲ್ಲ; ನಮ್ಮವರೂ ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ನನಗೆ ಎಸ್.ಐ.ಟಿ ಮೇಲೆ ಆಗಲೂ ವಿಶ್ವಾಸ ಇರಲಿಲ್ಲ, ಈಗಲೂ ಇಲ್ಲ’ ಎಂದರು.

WhatsApp Group Join Now
Telegram Group Join Now
Share This Article