ಬಳ್ಳಾರಿ,ಏ.17 ಯುವ ಮತದಾರರು ಯಾವುದೇ ಅಂಜಿಕೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಬೇಕು ಎಂದು ಸಂಡೂರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಸತೀಶ್.ಕೆ.ಹೆಚ್ ಅವರು ಕರೆ ನೀಡಿದರು.
ಲೋಕಸಭೆ ಚುನಾವಣೆ-2024ರ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಸಂಡೂರಿನ ಎಪಿಎಂಸಿ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಓಟರ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಾ ಕ್ರೀಡಾಪಟುಗಳು ಕಡ್ಡಾಯವಾಗಿ ಮತ ಚಲಾಯಿಸಬೇಕು ಹಾಗೂ ತಮ್ಮ ಸುತ್ತಮುತ್ತಲಿನ ಎಲ್ಲಾ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ತಂಡಗಳು ನೋಂದಣಿ ಮಾಡಿಕೊಂಡಿದ್ದವು. ಪ್ರಥಮ ಬಹುಮಾನವಾಗಿ ಡಿ.ಇ.ಓ ಸಂಡೂರು ತಂಡವು ಆಕರ್ಷಕ ಕಪ್ ಹಾಗೂ 2500 ರೂ. ನಗದು ಪಡೆದುಕೊಂಡರು.
ದ್ವಿತೀಯ ಬಹುಮಾನವಾಗಿ ಜಿಪಿಟಿ ಶಿಕ್ಷಕರ ತಂಡದವರು ಆಕರ್ಷಕ ಕಪ್ ಹಾಗೂ 1500 ರೂ. ನಗದು ಪಡೆದುಕೊಂಡರು.
ಮ್ಯಾನ್ ಆಫ್ ದಿ ಸಿರೀಸ್ ಬಹುಮಾನವನ್ನು ಖಾಜಾ ಸಂಡೂರು ಅವರು ಪಡೆದುಕೊಂಡರು.
ಬಳಿಕ ಸಹಿ ಸಂಗ್ರಹಣೆ, ಸೆಲ್ಫಿ ಬೂತ್‍ಗಳಲ್ಲಿ ಭಾವಚಿತ್ರ ತೆಗೆಸಿಕೊಳ್ಳುವುದರ ಮೂಲಕ ಯುವಕರು ನಮ್ಮ ದೇಶದ ಚುನಾವಣೆ ನಮ್ಮ ಹೆಮ್ಮೆ ಎಂದು ಘೋಷಣೆ ಸಾರಿದರು.
ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಯುವಕರಿಗೆ ಪೆÇ್ರೀತ್ಸಾಹ ನೀಡಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು. ನಂತರ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಈ ವೇಳೆ ತಹಸೀಲ್ದಾರ ಅನಿಲ್ ಕುಮಾರ್.ಜೆ., ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಓ ಎಚ್.ಷಡಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ದೈಹಿಕ ಶಿಕ್ಷಣ ಪರೀಕ್ಷಕ ಪ್ರಭುದೇವಯ್ಯ, ಶಿಕ್ಷಣ ಸಂಯೋಜಕ ಬಸವರಾಜ ಸಿ.ಸಂಡೂರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮಪ್ಪ.ಸಿ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಪ್ಪ ಎಲ್.ಹೆಚ್., ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಕೊಟ್ರೇಶ್.ಜಿ ಸೇರಿದಂತೆ ಆಟಗಾರರು, ಸಾರ್ವಜನಿಕರು ಉಪಸ್ಥಿತರಿದ್ದರು.