ಬಿಜೆಪಿಯವರು  ದೇಶಭಕ್ತಿ ಗುತ್ತಿಗೆ ತೆಗೆದುಕೊಂಡ ಹಾಗೆ ಮಾತನಾಡುತ್ತಾರೆ: ಮಾಜಿ ಡಿಸಿಎಂ ಸವದಿ ಗುಡುಗು

Ravi Talawar
WhatsApp Group Join Now
Telegram Group Join Now

ಬೆಳಗಾವಿ.,24: ದೇಶ ಭಕ್ತಿಯನ್ನು ಕೇವಲ ಬಿಜೆಪಿಗೆ ಗುತ್ತಿಗೆ ಕೊಟ್ಟ ಹಾಗೆ ಭಾಷಣ ಮಾಡ್ತಾರೆ. ಈ ದೇಶ ಉಳಿಯಬೇಕು ಎಂದರೆ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ? ಬಿಜೆಪಿ ಹುಟ್ಟಿದ್ದು ಯಾವಾಗ? ಎಂದು ಶಾಸಕರೂ ಆದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದರು.

ಮೂಡಲಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 1950 ರಲ್ಲಿ ಜನ ಸಂಘ ಹುಟ್ಟಿತು. ಅದು ನಂತರ ಬಿಜೆಪಿ ಆಯ್ತು. ಆದರೆ, ಅದಕ್ಕಿಂತ ಮೊದಲು ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು. ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ ಖರ್ಗೆ, ಡಿಕೆಶಿ ಮಾತನಾಡುತ್ತಾ ಕುಳಿತಿದ್ದರು. ಅವರ ಗಮನ ಸೆಳೆಯಲು ನಾನು ಸ್ವಲ್ಪ ಈಕಡೆ ಕೇಳಿ ಅಪಾರ್ಥ ಮಾಡ್ಕೊಬೇಡಿ ಎಂದಿದ್ದೆ. ಬಿಜೆಪಿಯವರು ಕಟ್ ಅಂಡ್​​​​ ಪೇಸ್ಟ್ ಮಾಡುವುದರಲ್ಲಿ ಬಹಳ ನಿಸ್ಸೀಮರು. ಅಪಾರ್ಥ ಮಾಡ್ಕೋಬೇಡಿ ಎಂದಿದ್ದನ್ನು ಮಾತ್ರ ಕಟ್ ಮಾಡಿ ಮೋದಿ ಸಾಹೇಬರಿಗೆ ಕಳುಹಿಸಿದ್ದಾರೆ. ಹಾಗಾಗಿ, ಈಗ ನಾ ಮಾತನಾಡಿದ ಈ ವಿಡಿಯೋ ಮಾಡಿ ಮೋದಿ ಸಾಹೇಬರಿಗೆ ಕಳುಹಿಸಿ ಎಂದ ಅವರು, ನಿಜವಾದ ದೇಶ ಭಕ್ತರು ಕಾಂಗ್ರೆಸಿಗರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಬಿಜೆಪಿ‌ ಹುಟ್ಟಿರಲಿಲ್ಲ. ಚಕ್ರವರ್ತಿ ಸೂಲಿಬೆಲೆ ಎಂಬ ಅರಬೆಂದ ವ್ಯಕ್ತಿಗಳಿಂದ ಜನರ ಮುಂದೆ ಸುಳ್ಳು ಹೇಳಿಸುವುದೇ ಬಿಜೆಪಿ ಕೆಲಸ ಎಂದು ಹರಿಹಾಯ್ದರು.

ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕನಾಗಿ ಕೆ.ಎಸ್.ಈಶ್ವರಪ್ಪ ಒಬ್ಬರೇ ಇದ್ದದ್ದು, ಈ‌ ಚುನಾವಣೆಯಲ್ಲಿ ಅವರನ್ನೂ ಮುಗಿಸಿಬಿಟ್ಟರು. ಇದರಿಂದ ಹಿಂದುಳಿದ ವರ್ಗಗಳ ಮೇಲೆ ಬಿಜೆಪಿಯವರಿಗೆ ಅಭಿಮಾನ ಇಲ್ಲ ಎಂದು ತೋರುತ್ತದೆ. ಇದಕ್ಕೆ ಹಾಲು ಮತ ಸಮುದಾಯದವರು ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದರೂ ಈಶ್ವರಪ್ಪಗೆ ಬಿಜೆಪಿ ಅನ್ಯಾಯ ಎಸಗಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ಟೀಕಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಗೋಕಾಕ್ ಶಾಸಕರು ದಿನಬೆಳಗಾದರೆ ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಬೀಳಿಸೋಕೆ ಪ್ರಯತ್ನಿಸಿದರೆ ನಾಡಿನ ಸಮಸ್ತ ಜನರು, ಅದರಲ್ಲೂ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಂಥ ಒಬ್ಬ ನಾಯಕನನ್ನು ಕೆಳಗಿಳಿಸಲು ಸಾಧ್ಯವೇ? ಚುನಾವಣೆಗೂ ಮುನ್ನವೇ ಕೇಂದ್ರದಲ್ಲಿ ಮಂತ್ರಿ ಆಗಲು ಡಜನ್ ಗಟ್ಟಲೆ ಆಕಾಂಕ್ಷಿಗಳು ರೆಡಿಯಾಗುತ್ತಿದ್ದಾರೆ. ಮಂತ್ರಿಯಾಗುವ ಕನಸಿನಲ್ಲಿರುವ ಅಭ್ಯರ್ಥಿಗಳು ಮೊದಲು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಈ ವೇಳೆ, ಮುಖಂಡರಾದ ಅರವಿಂದ್ ದಳವಾಯಿ, ಅನಿಲ್ ದಳವಾಯಿ, ಬಿ.ಬಿ.ಹಂದಿಗುಂದ್, ಎಸ್.ಆರ್. ಸೋನವಾಲ್ಕರ್, ಪ್ರಕಾಶ್ ಅರಳಿ, ರಮೇಶ್ ಉಟಗಿ ಸೇರಿ ಮತ್ತಿತರರು ಇದ್ದರು.

WhatsApp Group Join Now
Telegram Group Join Now
Share This Article