ತಂದೆ-ಮಕ್ಕಳ ಜುಗಲಬಂದಿ: ಮಗಳ ಪರ ತಂದೆ ಸಚಿವ ಶಿವಾನಂದ, ಮಗ ಬಿಜೆಪಿಯಲ್ಲಿ ಸಕ್ರಿಯ

Ravi Talawar
WhatsApp Group Join Now
Telegram Group Join Now

ಬಾಗಲಕೋಟೆ, ಏಪ್ರಿಲ್​ 06: ಬಾಗಲಕೋಟೆ ಲೋಕಸಭಾ ಕ್ಷೇತ್ರದ  ಈ ಬಾರಿಯ ಚುನಾವಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ​ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಸಂಯುಕ್ತ ಪಾಟೀಲ್​ ಅವರಿಗೆ ಇದು ಮೊದಲನೇ ಚುನಾವಣೆಯಾಗಿದೆ. ಮೊದಲ ಚುನಾವಣೆಯಲ್ಲೇ ಸಂಯುಕ್ತ ಪಾಟೀಲ್​ ಅವರಿಗೆ ಹಲವು ಸವಾಲುಗಳು ಎದುರಾಗಿವೆ. ಒಂದಡೆ ಹುನುಗುಂದ ಕಾಂಗ್ರೆಸ್​ ಶಾಸಕ ವಿಜಯನಾಂದ ಕಾಶಪ್ಪನವರ್​ ಪತ್ನಿ ವೀಣಾ ಕಾಶಪ್ಪನವರ್​ ತಮಗೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ. ಮತ್ತೊಂದಡೆ ಸಂಯುಕ್ತ ಪಾಟೀಲ್​​ ಅಣ್ಣ ಹರ್ಷಗೌಡ  ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಅಣ್ಣ ಹರ್ಷಗೌಡ ಬಿಜೆಪಿ ಸೇರ್ಪಡೆ ವಿಚಾರವಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟಿಲ್ ಮಾತನಾಡಿ, ಅವರು ಬಿಜೆಪಿ ಸೇರಿರುವುದು ಈಗ ಎಲ್ಲರಿಗೂ ಗೊತ್ತಾಗಿರಬಹುದು. ಆದರೆ ಅವರು ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಸಮಯದಿಂದ ಗುರುತಿಸಿಕೊಂಡಿದ್ದಾರೆ. ಇದು ಮಾಧ್ಯಮಕ್ಕೆ ಹೊಸ ವಿಷಯವಾಗಿರಬಹುದು, ಆದರೆ ಇದು ತುಂಬಾ ಹಳೆಯ ವಿಷಯ. ಅವರು ಬಿಜೆಪಿ ಅಂತ ಮೊದಲಿಂದಲೂ ಎಲ್ಲರಿಗೂ ಗೊತ್ತು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕೂಡ ಅವರವರ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ನಾನು ಅವರಿಗೆ ಒಳ್ಳೆಯದಾಗಲಿ ಅಂತ‌ ಹಾರೈಸುತ್ತೇನೆ. ಅವರಿಗೆ ಬೆಸ್ಟ್ ಆಫ್​ ಲಕ್ ಆದರೆ ಗೆಲುವು ನಮ್ಮದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಆದರೆ ಹರ್ಷಗೌಡ ಅವರ ತಂದೆ ನಿಮ್ಮ ಪರ ಪ್ರಚಾರ ಮಾಡುತ್ತಿದ್ದಾರೆ ಇದಕ್ಕೇನಂತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಂದೆ (ಶಿವಾನಂದ ಪಾಟೀಲ್​) ನಾ ಚಿಕ್ಕವಳಿದ್ದಾಗ ಬಹಳ ಬ್ಯೂಸಿಯಾಗಿರುತ್ತಿದ್ದರು. ಹೀಗಾಗಿ ನಾನು ಬೆಳೆದಿರುವುದು ನಮ್ಮ ದೊಡ್ಡಪ್ಪ ಶಿವಶರಣಗೌಡ (ಹರ್ಷಗೌಡ) ಅವರ ಮಡಿಲಲ್ಲಿ. ತುಂಬಾ ಸಮಯ ಅವರ ಜೊತೆ ಕಳೆದಿದ್ದೇನೆ. ಈಗಲೂ ಅವರು ನಮ್ಮ ತಂದೆಗಿಂತಲೂ ಹೆಚ್ಚು ನನ್ನನ್ನು ಪ್ರೀತಿ ಮಾಡುತ್ತಾರೆ. ನಾನು ಎಲ್ಲೆ ಹೋದರೂ ಅವರು ನನ್ನ ಪರವಾಗಿ ಬರುತ್ತಾರೆ. ಇದೀಗ ಚುನಾವಣೆಗೆ ನಿಂತಿದ್ದೇನೆ ಮಗಳಿಗೋಸ್ಕರ ಬರದೆ ಮತ್ಯಾರಿಗೋಸ್ಕರ ಬರುತ್ತಾರೆ. ಅವರಿಗೆ ನನ್ನ ಮೇಲೆ ಜಾಸ್ತಿ ಪ್ರೀತಿ. ಹರ್ಷಗೌಡ ನನ್ನ ದೊಡ್ಡಪ್ಪನ ಮಗ, ಸ್ವಂತ ಅಣ್ಣ ಅಲ್ಲ. ಅವರು ಮೊದಲಿನಿಂದಲೂ ಬಿಜೆಪಿ ಆರ್​ಎಸ್​ಎಸ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇವಾಗ ವೇದಿಕೆ ಮೇಲೆ‌ ಕಾಣಿಸಿಕೊಂಡಿದ್ದಕ್ಕೆ ಹೊಸದು ಅನಿಸುತ್ತಿದೆ ಎಂದರು.

WhatsApp Group Join Now
Telegram Group Join Now
Share This Article