ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವರೆಗೂ ಮತದಾನ ಮಾಡುವುದಿಲ್ಲ : ರೈತ ಮುಖಂಡ ಹೊನ್ನೂರು ಪ್ರಕಾಶ್

Ravi Talawar
WhatsApp Group Join Now
Telegram Group Join Now

ಹನೂರು,ಮಾ26 : ಕ್ಷೇತ್ರದಲ್ಲಿ ಬುಡಕಟ್ಟು ಬೇಡ ಗಂಪಣ ಸಮುದಾಯದವರೇ ಹೆಚ್ಚಾಗಿರುವ ಹಲವಾರು ಕುಗ್ರಾಮಗಳಿಗೆ ಅಲ್ಲಿ ವಾಸಿಸುವ ಜನರಿಗೆ ಕನಿಷ್ಠ ಪಕ್ಷ ಮೂಲಭೂತ ಸೌಲಭ್ಯ ಕಲಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ,ಚುನಾವಣಾ ಸಂದರ್ಭದಲ್ಲಿ ಮಾತ್ರ ಬರೀ ಆಶ್ವಾಸನೆ ನೀಡಿ ನಂತರ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್‌ಪ್ರಕಾಶ್ ರಾಜಕಾರಣಿಗಳ ವಿರುದ್ದ ಕಿಡಿಕಾರಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 18 ಗ್ರಾಮಗಳಲ್ಲಿ ಬೇಡಗಂಪಣ ಬುಡಕಟ್ಟು ಸಮುದಾಯದವರೇ ಹೆಚ್ಚು ವಾಸಿಸುತ್ತಿದ್ದು ಅಲ್ಲಿನ ಕುಗ್ರಾಮಗಳಿಗೆ ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಕಳೆದ ಏಳೆಂಟು ದಶಕಗಳಿಂದ ಮಲೆ ಮಹದೇಶ್ವರ ಬೆಟ್ಟ ಆರಾಧ್ಯ ದೈವ ಮಲೆ ಮಾದೇಶ್ವರನ ಸನ್ನಿಧಿಯ ಅಸುಪಾಸಿನಲ್ಲಿ ವಾಸಿಸುತ್ತಿರುವ ಬೇಡಗಂಪಣ ಸಮುದಾಯದ ಜನರೆ ಹೆಚ್ಚಾಗಿರುವ ವಿವಿಧ ಗ್ರಾಮಗಳಾದ ಹಳೆಯೂರು, ಕಿರನಹೋಲ, ತುಳಸಿಕೆರೆ, ಇಂಡಿಗನಾಥ, ಮೆಂದರೆ, ತೇಕಣೆ, ಪಡೆಸಲನಾಥ, ನಾಗಮಲೆ ಹಾಗೂ ಕೊಂಬಡಿಕ್ಕಿ ದೊಡ್ಡಾಣೆ ಹಾಗೂ ವಿವಿಧ ಗ್ರಾಮಗಳಲ್ಲಿ ವಾಸಿಸುವ నిವಾಸಿಗಳಿಗೆ ಮೂಲಭೂತ ಸೌಲಭ್ಯವಾದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಮತ್ತು ವಿದ್ಯುತ್ ಸಂಪರ್ಕ, ವಾಹನ ವ್ಯವಸ್ಥೆ ಹಾಗೂ ಇಲ್ಲಿನ ನಾಗರಿಕರಿಗೆ ಆರೋಗ್ಯ ಸಮಸ್ಯೆಗಳು ಉಂಟಾದಾಗ ತುರ್ತು ವಾಹನಗಳ ಬೇಡಿಕೆಯನ್ನು ಕಳೆದ ಏಳೆಂಟು ದಶಕಗಳಿಂದ ಇಲ್ಲಿನ ಜನತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಿಲ್ಲ ಪ್ರತಿ ಬಾರಿಯು ಮನವಿ ಸಲ್ಲಿಸುತ್ತಾ ಬಂದಿದ್ದಾರೆ.

ಚುನಾವಣೆಯ ಹುಸಿ ಭರವಸೆ: ಆದರೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಬರುವ ಜನಪ್ರತಿನಿಧಿ ಅಧಿಕಾರಿಗಳು ಇಲ್ಲಿನ ಮೂಲ ನಿವಾಸಿಗಳಿಗೆ ಭರವಸೆ ನೀಡಿ ಸವಲತ್ತು ನೀಡದ ಪರಿಣಾಮ ಇಲ್ಲಿನ ಗ್ರಾಮಗಳ ಜನತೆ ಇಂದಿಗೂ ಸ್ವಾತಂತ್ರ್ಯ ಬಂದು ಎಷ್ಟು ವರ್ಷಗಳು ಕಳೆದರೂ ಹಲವಾರು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಹದೇಶ್ವರರ ದೇವಾಲಯದಿಂದ ಹೊರಟು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗದ ರಸ್ತೆಯಲ್ಲಿ ತೆರಳಿ ಮಲೆ ಮಾದೇಶ್ವರ ಬೆಟ್ಟ ಹಾಗೂ ಹನೂರು ಮುಖ್ಯ ರಸ್ತೆ ಬಳಿ ಪ್ರತಿಭಟನೆ ನಡೆಸಿ ನಂತರ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನಾಕಾರರು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು.

ಮಾದಪ್ಪ ಪೂಜೆಯಲ್ಲಿ ವಿವಿಧ ಗ್ರಾಮಗಳ ಮೂಲ ನಿವಾಸಿಗಳು ನಾಗಮಲೆಯಲ್ಲಿ ನೆಲೆಸಿರುವುದರಿಂದ ನಾಗಮಲ್ಲೇಶ್ವರನಿಗೆ ಪೂಜೆ ಸಲ್ಲಿಸಲು ಬರುವ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಿದೆ ಹೀಗಾಗಿ ಚಾರಣಕ್ಕೆ ಬರುವವರನ್ನು ತಡೆಗಟ್ಟುವುದು ಕಾನೂನಿನ ನಿಯಮ ಆದರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ತಡೆಗಟ್ಟುವುದು ಬೇಡ ಎಂದು ಇದೇ ವೇಳೆಯಲ್ಲಿ ಒತ್ತಾಯಿಸಿದರು.

ಎಸಿಎಫ್‌ ಭರವಸೆ: ಎ ಸಿ ಎಫ್ ಚಂದ್ರಶೇಖರ್ ಮಾತನಾಡಿ ಅರಣ್ಯ ಇಲಾಖೆಗೆ ಮೂಲ ಸೌಲಭ್ಯ ಕಲ್ಪಿಸಲು ವಿವಿಧ ಇಲಾಖೆ ಅರ್ಜಿ ಸಲ್ಲಿಸಬೇಕು ಸಲ್ಲಿಸಿದರೆ ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಇಲ್ಲಿಯವರೆಗೆ ಯಾವ ಇಲಾಖೆಯು ಸಹ ಅನುಮತಿಗಾಗಿ ಅರ್ಜಿ ಸಲ್ಲಿಸದೆ ಇರುವುದರಿಂದ ನಿಮ್ಮ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳು ವಿಳಂಬವಾಗುತ್ತಿದೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ನಂತರ ಪ್ರತಿಭಟನಾಕಾರರು ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರೆಗೆ ಪ್ರತಿಭಟನೆ ಹಿಂದೆ ಪಡೆಯುವುದು ಇಲ್ಲ ಎಂದು ಒತ್ತಾಯಿಸಿ ಅನಿರ್ದಿಷ್ಟ ಅವಧಿವರೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಲೋಕಸಭಾ ಚುನಾವ ಣೆಯನ್ನು ಬಹಿಷ್ಕರಿಸುವುದಾಗಿ ಎಲ್ಲಾ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಇದೇ ಸಮಯದಲ್ಲಿ ವಿವಿಧ ಗ್ರಾಮದ ಮುಖಂಡರು ಮಹಿಳೆಯರು ರೈತ ಸಂಘದ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.

WhatsApp Group Join Now
Telegram Group Join Now
Share This Article