ಚುನಾವಣಾ ಪ್ರಣಾಳಿಕೆಯ ಭರವಸೆಗಳು ಆಮಿಷಗಳಾಗುವುದಿಲ್ಲ: ಹೈಕೋರ್ಟ್ ಆದೇಶ

Ravi Talawar
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 18: ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಭರವಸೆಗಳು ಅಭ್ಯರ್ಥಿಗಳು ಮತದಾರರಿಗೆ ಒಡ್ಡಿದ ಆಮಿಷಗಳಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಇದರಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರೆಂಟಿಗಳ ಹೆಸರಿನಲ್ಲಿ ಗೆದ್ದು ಬಂದಿರುವ ಹಲವು ಕಾಂಗ್ರೆಸ್‌ ಶಾಸಕರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳು ಅನೂರ್ಜಿತವಾಗಲಿವೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ರಿಜ್ವಾನ್ ಅರ್ಷದ್ ಆಯ್ಕೆಯನ್ನು ಪ್ರಶ್ನಿಸಿ ಬಿ.ಲಕ್ಷ್ಮೀದೇವಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ.ಎಸ್‌. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ. ಹಾಗಾಗಿ ರಿಜ್ವಾನ್ ಅರ್ಷದ್ ಆಯ್ಕೆ ಸಿಂಧುವಾಗಿದೆ. ಅವರಿಗಿದ್ದ ಚುನಾವಣಾ ತಕರಾರು ಅರ್ಜಿ ತೊಡಕು ನಿವಾರಣೆಯಾಗಿದೆ.

ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಎಸ್.ಸುಬ್ರಮಣ್ಯಂ ಬಾಲಾಜಿ ಪ್ರಕರಣದ ತೀರ್ಪು ಇದಕ್ಕೆ ಅನ್ವಯವಾಗುವುದಿಲ್ಲ. ಆ ತೀರ್ಪು ಪ್ರಶ್ನಿಸಿ ವಿಸ್ತೃತ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬ ಅರ್ಜಿದಾರರ ಪರ ವಕೀಲರವನ್ನು ವಾದವನ್ನುನ್ಯಾಯಪೀಠ ತಳ್ಳಿಹಾಕಿದೆ. “ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123ರ ಪ್ರಕಾರ ಅಭ್ಯರ್ಥಿ ಅಥವಾ ಆತನ ಏಜೆಂಟ್ ಅಥವಾ ಅಭ್ಯರ್ಥಿಯ ಪರವಾಗಿ ಯಾವುದೇ ವ್ಯಕ್ತಿ ಚುನಾವಣಾ ಭರವಸೆಗಳನ್ನು ನೀಡಬಹುದು. ಆದರೆ ಈ ಪ್ರಕರಣದಲ್ಲಿ ಐದು ಗ್ಯಾರಂಟಿಗಳನ್ನು ರಾಜಕೀಯ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.

ಅದನ್ನು ಪ್ರತಿವಾದಿ ಅಥವಾ ಚುನಾವಣಾ ಎಜೆಂಟ್‌ ಒಪ್ಪಿಗೆಯೊಂದಿಗೆ ಪ್ರಕಟಿಸಲಾಗಿದೆ. ಹಾಗಾಗಿ ಅದು ಮತದಾರರನ್ನು ಭ್ರಷ್ಟಗೊಳಿಸಿದಂತೆ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಈ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಮತದಾರರಿಗೆ ಘೋಷಣೆ ಮಾಡಿತ್ತು. ಆದರೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123 (2) ಅನ್ವಯ ಇದು ಮತದಾರರಿಗೆ ಆಮಿಷವೊಡ್ಡಿದಂತಾಗುತ್ತದೆ, ‘ಭ್ರಷ್ಟರನ್ನಾಗಿ’ ಮಾಡಿದಂತಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರೆಂದು ಹೇಳಲಾಗಿದೆ.

ಆದರೆ ಅರ್ಜಿದಾರರು ಪ್ರಣಾಳಿಕೆಯ ಭರವಸೆಗಳು ಹೇಗೆ ಭ್ರಷ್ಟಚಾರಕ್ಕೆ ಎಡೆಮಾಡಿಕೊಡುತ್ತವೆ ಎಂಬುದನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಚುನಾವಣಾ ಪ್ರಣಾಳಿಕೆ ಅಂಶಗಳು ಅಭ್ಯರ್ಥಿ ವೈಯಕ್ತಿಕವಾಗಿ ಮತದಾರರಿಗೆ ಒಡ್ಡಿದ ಆಮಿಷಗಳಾಗುವುದಿಲ್ಲ. ಸುಪ್ರೀಂಕೋರ್ಟ್ ಎಸ್.ಸುಬ್ರಮಣ್ಯಂ ಬಾಲಾಜಿ ವರ್ಸಸ್‌ ಸ್ಟೇಟ್‌ ಆಫ್ ತಮಿಳುನಾಡು ಪ್ರಕರಣದಲ್ಲಿ, ಚುನಾವಣಾ ಪ್ರಣಾಳಿಕೆಯ ಅಂಶಗಳು ಆರ್‌.ಪಿ ಕಾಯಿದೆ 123ರ ಅನ್ವಯ ಮತದಾರರಿಗೆ ಆಮಿಷಗಳಾಗುವುದಿಲ್ಲವೆಂದು ಆದೇಶಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಪ್ರತಿವಾದಿ ಅಭ್ಯರ್ಥಿಯು ತನ್ನ ವೈಯಕ್ತಿಕ ನೆಲೆಯಲ್ಲಿ ಯಾವುದೇ ಗ್ಯಾರಂಟಿಗಳನ್ನು ಅಥವಾ ಭರವಸೆಗಳನ್ನು ನೀಡಿಲ್ಲ. ಅಲ್ಲದೆ, ಈಗಾಗಲೇ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಐದು ಗ್ಯಾರಂಟಿಗಳ ಪ್ರಣಾಳಿಕೆ ಅಂಶಗಳನ್ನು ಮತದಾರರಿಗೆ ಆಮಿಷವೊಡ್ಡಿದ್ದ ಅಥವಾ ಅವರನ್ನು ಭ್ರಷ್ಟಗೊಳಿಸಿವೆ ಎಂದು ಹೇಳಲಾಗದು ಎಂದು ನ್ಯಾಯಪೀಠ ಆದೇಶಿಸಿದೆ.

 

WhatsApp Group Join Now
Telegram Group Join Now
Share This Article