ಕಾಂಗ್ರೆಸ್ ಯೋಜನೆ ನೋಡಿ ಮತ ಕೊಡಿ: ಮೃಣಾಲ ಪರ ಚನ್ನರಾಜ ಹಟ್ಟಿಹೊಳಿ ಕಾರ್ಯಕರ್ತರ ಸಭೆ

Ravi Talawar
WhatsApp Group Join Now
Telegram Group Join Now
ಬೆಳಗಾವಿ,ಏಪ್ರಿಲ್ 11:  ನಾವು ಯಾರನ್ನೋ ನೋಡಿ ಮತ ಕೊಡಿ ಎಂದು ಕೇಳುವುದಿಲ್ಲ. ನಮ್ಮ ಇಲ್ಲಿಯವರೆಗಿನ ಸಾಧನೆ, ಬದ್ಧತೆ ಮತ್ತು ಕಾಂಗ್ರೆಸ್ ಪಕ್ಷದ ಯೋಜನೆ ನೋಡಿ ಮತ ಕೊಡಿ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಉಚಗಾಂವ ಭಾಗದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಾವು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ  ಮಾಡಿರುವ ಕೆಲಸಗಳನ್ನು ನೋಡಿ ನೀವೆಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಸಹ ಬೆಂಬಲಿಸಿ. ಮೃಣಾಲ ಹೆಬ್ಬಾಳಕರ್ ನಿಮಗೆ ಹೊಸಬನಲ್ಲ. ನಿಮ್ಮ ಕಣ್ಣ ಮುಂದೆಯೇ ಬೆಳೆದ ಹುಡುಗ. ದಿನದ 24 ಗಂಟೆಯೂ ನಿಮ್ಮ ಕೈಗೆ ಸಿಗುವ ಹುಡುಗ. ನಿಮ್ಮೆಲ್ಲರ ಸೇವೆ ಮಾಡುವ, ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸು ಹೊತ್ತು ಕಣಕ್ಕೆ ಇಳಿದಿದ್ದಾನೆ. ಲಕ್ಷ್ಮೀ ಹೆಬ್ಬಾಳಕರ್ ಕುಟುಂಬದ ಜೊತೆಗೆ ನಿಮಗೆ ಕಳೆದ 10 ವರ್ಷಗಳಿಂದಲೂ ನಿಕಟವಾದ ಸಂಬಂಧವಿದೆ. ಹಾಗಾಗಿ ಒಂದೇ ಕುಟುಂಬದಂತಿರುವ ನಾವೆಲ್ಲ ಸೇರಿ ಮುಂದಿನ ದಿನಗಳಲ್ಲೂ ಕೆಲಸ ಮಾಡೋಣ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಕಾಂಗ್ರೆಸ್ ಪಕ್ಷದ ಇತಿಹಾಸ ದೊಡ್ಡದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಬ್ರಿಟೀಶರನ್ನು ಭಾರತದಿಂದ ಓಡಿಸಿದ ನಂತರ ಶೂನ್ಯದಿಂದ ರಾಷ್ಟ್ರವನ್ನು ಕಟ್ಟಿದ ಪಕ್ಷ ಕಾಂಗ್ರೆಸ್. ಹಿಂದಿನಿಂದಲೂ ನುಡಿದಂತೆ ನಡೆದಿದೆ. ಅಭಿವೃದ್ಧಿಯಲ್ಲಿ ಬದ್ಧತೆ ತೋರಿಸಿದೆ. ಕಳೆದ ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸುವ ಮೂಲಕ ಜನರ ಜೀವನದಲ್ಲಿ ನೆಮ್ಮದಿ ಮೂಡಿಸಿದೆ. ಇದರಿಂದಾಗಿ ಪಕ್ಷದ ಮೇಲಿನ ವಿಶ್ವಾಸ ಇನ್ನಷ್ಟು ಹೆಚ್ಚುವಂತಾಗಿದೆ. ಮುಂದಿನ ದಿನಗಳಲ್ಲಿ ಸಹ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ಹಲವಾರು ಯೋಜನೆಗಳು ಬರಲಿವೆ. ನಿಮ್ಮೆಲ್ಲರ ಸಹಕಾರ ಸದಾ ಇರಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.
WhatsApp Group Join Now
Telegram Group Join Now
Share This Article